ಕರಾವಳಿ

ಸೆ.28 ಪುತ್ತೂರಿನಲ್ಲಿ ಮೊದಲ ಮಿಂಚು ಬಂಧಕ ಲೋಕಾರ್ಪಣೆ

ಪುತ್ತೂರು: ಇನ್ನು ಮಳೆಗಾಲ ಆರಂಭ ಮತ್ತು ಕೊನೇ ದಿನಗಳಲ್ಲಿ ಬರುವ ಸಿಡಿಲಿಗೆ ಪುತ್ತೂರು ಬಿರುಮಲೆ ಬೆಟ್ಟ ಆಸುಪಾಸಿನ ಸುಮಾರು 2 ಕಿ ಮೀ ಸುತ್ತಳತೆಯ ಮಂದಿ ಭಯಪಡುವ ಅಗತ್ಯವಿಲ್ಲ. ಎಷ್ಟೇ ಅಬ್ಬರದ ಮಿಂಚು, ಸಿಡಿಲು ಬಂದರೂ ಅದನ್ನು ತಡೆಯುವ ಆಧುನಿಕ ತಂತ್ರಜ್ಞಾನದ ಮಿಂಚು ಬಂಧಕವನ್ನು ಬಿರುಮಲೆ ಬೆಟ್ಟದಲ್ಲಿ ಅಳವಡಿಸಲಾಗಿದೆ.

ಸೆ.28ರಂದು ಇದರ ಲೋಕಾರ್ಪನೆಯೂ ನಡೆಯಲಿದೆ. ಮಿಂಚು ಬಂಧಕ ಅಳವಡಿಸಬೇಕೆಂದು ಪುತ್ತೂರು ಜನತೆಯ ಬಹುಕಾಲದ ಬೇಡಿಕೆಯನ್ನು ಶಾಸಕ ಅಶೋಕ್ ರೈ ಈಡೇರಿಸಿದ್ದಾರೆ. ಪ್ರಾರಂಭದ ಪ್ರಾಯೋಗಿಕ ಹಂತದ ಮಿಂಚು ಬಂಧಕ ಇದಾಗಿದ್ದು ಬಿರುಮಲೆ ಬೆಟ್ಟ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಿವಿಧ ಕಡೆಗಳಲ್ಲಿ ಈ ಮಿಂಚು ಬಂಧಕ ಪ್ರಾಯೋಗಿಕವಾಗಿ ಅಳವಡಿಸುವ ಸಿದ್ದತೆಗಳು ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಪ್ರತೀ ಮಳೆಗಾಲ ಆರಂಭದ ದಿನ ಮತ್ತು ಮಳೆಗಾಲ ಕೊನೇಯ ದಿನಗಳಲ್ಲಿ ಸಿಡಿಲ ಅಬ್ಬರ ಜೋರಾಗಿಯೇ ಇರುತ್ತದೆ. ಅನೇಕ ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆ ಹೆಚ್ಚಾಗಿ ಈ ಅವಘಡಕ್ಕೆ ಬಲಿಯಾಗುತ್ತಿದ್ದಾರೆ. ಕೃಷಿ ಕೆಲಸ ಮಾಡಿಕೊಳ್ಳುತ್ತಿರುವಾಗ, ಕೃಷಿ ಪಂಪ್ ಶೆಡ್‌ಗಳಲ್ಲಿ, ಮನೆಗೆ ಸಿಡಿಲು ಬಡಿತ ಹೀಗೇ ಹತ್ತು ಹಲವು ಕಾರಣಗಳಿಂದ ಸಾವುಗಳು ಉಂಟಾಗುತ್ತಿದೆ. ಸಿಡಿಲಿನ ಆಘಾತಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಐದಾರು ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದಾರೆ. ಈ ಆಘಾತದಿಂದ ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ಅತ್ಯಾಧುನಿಕ ತಂತ್ರಜ್ಞಾನದ ಮಿಂಚು ಬಂಧಕ ಅಳವಡಿಸಲಾಗಿದೆ.

ಪ್ರಾಯೋಗಿಕವಾಗಿ ಬಿರುಮಲೆ ಬೆಟ್ಟದಲ್ಲಿ ಈ ಬಂಧಕವನ್ನು ಅಳವಡಿಸಲಾಗಿದೆ. ವಾಯು ಮಾರ್ಗದ ಮೂಲಕ ಇದರ ವ್ಯಾಪ್ತಿಯನ್ನು ಪರಿಗಣಿಸಲಾಗುತ್ತದೆ. ಬಿರುಮಲೆ ಬೆಟ್ಟವನ್ನು ಕೇಂದ್ರೀಕರಿಸಿ ಎರಡು ಕಿ ಮೀ ಸುತ್ತಳತೆಯಲ್ಲಿ ಇದು ತಮ್ಮ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಎಲ್ಲೇ ಮಿಂಚು ಹೊಡೆದರೂ ಅದನ್ನು ಇದು ಸ್ವೀಕರಿಸುತ್ತದೆ ಮತ್ತು ಅಲ್ಲೇ ಅದರ ಶಕ್ತಿಯನ್ನು ಕಡಿಮೆ ಮಾಡಿ ಭೂಮಿಯೊಳಗೆ ಸೇರಿಸಿಕೊಳ್ಳುತ್ತದೆ ಇದರಿಂದ ಮಿಂಚಿನಿಂದ ಉಂಟಾಗುವ ಅಪಾಯವನ್ನು ತಪ್ಪಿಸುತ್ತದೆ. ಈ ಎರಡು ಕಿ ಮೀ ವ್ಯಾಪ್ತಿಯಲ್ಲಿ ಸಿಡಿಲು ಮಿಂಚಿಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗುವುದಿಲ್ಲ ಮತ್ತು ವಿದ್ಯುತ್ ಪ್ರವಹಕ ಯಂತ್ರಗಳು ಹಾನಿಯಾಗುವುದಿಲ್ಲ.

ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವ ಮಿಂಚು ಬಂಧಕ ಯಶಶ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಪ್ರತೀ ಗ್ರಾಮಗಳಲ್ಲಿ ಅವಶಕ್ಯಕತೆಗನುಗುಣವಾಗಿ ಮಿಂಚು ಬಂಧಕವನ್ನು ಅಳವಡಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!