ಉಪ್ಪಿನಂಗಡಿ: ಶಾಮಿಯಾನ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ಓರ್ವ ಮೃತ್ಯು, ನಾಲ್ಕು ಮಂದಿ ಆಸ್ಪತ್ರೆಗೆ ದಾಖಲು
ಉಪ್ಪಿನಂಗಡಿ: ಕಾರ್ಯಕ್ರಮವೊಂದಕ್ಕೆ ಶಾಮಿಯಾನ ಹಾಕುವ ವೇಳೆ ಕಬ್ಬಿಣದ ಟ್ರೆಸ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಕಡೇಶಿವಾಲಯದ ಕಾಡಬೆಟ್ಟು ಎಂಬಲ್ಲಿ ನಡೆದಿದೆ.

ಕಲ್ಲಡ್ಕದ ಶಾಮಿಯಾನ ಸಂಸ್ಥೆಯ 5 ನೌಕರರು ಕಾರ್ಯಕ್ರಮವೊಂದರ ಸಲುವಾಗಿ ಶಾಮಿಯಾನ ಹಾಕಲು ತೆರಳಿದ್ದರು. ಶಾಮಿಯಾನ ಹಾಕುವ ವೇಳೆ ಉದ್ದದ ಕಬ್ಬಿಣದ ಟ್ರೆಸ್ ಪಕ್ಕದಲ್ಲಿ ಹಾದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಕಾರ್ಮಿಕ ಕುಂದನ್(18) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದಂತೆ 4 ಮಂದಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕುಂದನ್ ಬಿಹಾರ ಮೂಲದವನಾಗಿದ್ದಾನೆ. ಗಾಯಗೊಂಡವರ ಪೈಕಿ ಬಬ್ಲೂ ಮತ್ತು ಪ್ರದೀಪ್ ಜಾರ್ಖಂಡ್ ಮೂಲದವರಾಗಿದ್ದರೆ, ಪ್ರದೀಪ್ ಪಶ್ಚಿಮ ಬಂಗಾಳದವರಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.