ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ ಬೆನ್ನಲ್ಲೇ ಸ್ಫೋಟಕ ಹೇಳಿಕೆ ನೀಡಿದ ಲಕ್ಷ್ಮಣ್ ಸವದಿ
ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಜೆಪಿಗೆ ಬರುವಂತೆ ನನಗೂ ಬಹಳ ಒತ್ತಡ ಇದೆ. ಕಹಿ ಘಟನೆಗಳನ್ನ ಮರೆಯಬೇಕು, ವಾಪಸ್ ಬಿಜೆಪಿ ಗೆ ತಿರುಗಿ ಬರಬೇಕು ಎಂದು ಬಿಜೆಪಿಯವರು ಬೇಡಿಕೆ ಇಟ್ಟಿದ್ದಾರೆ ಎಂದು ಲಕ್ಷ್ಮಣ್ ಸವದಿ ಮಾಧ್ಯಮಕ್ಕೆ ಹೇಳಿರುವುದಾಗಿ ವರದಿಯಾಗಿದೆ.

ಏನೇ ಒತ್ತಡ ಬಂದರೂ ನನ್ನ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ಜನ ನನ್ನ ಆಯ್ಕೆ ಮಾಡಿದ್ದಾರೆ. ಬಹಳ ದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ. ಬಿಜೆಪಿಗೆ ಹೋಗುವ ಆಲೋಚನೆ ಇಲ್ಲ. ಯಾರು ಒತ್ತಡ ಹಾಕುತ್ತಿದ್ದಾರೆ, ಸಂಪರ್ಕ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸುವುದಿಲ್ಲ. ಅದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ನನ್ನ ನಿಲುವು ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.