ಕರಾವಳಿ

ಕುಂಬ್ರ ಸರಣಿ ಕಳ್ಳತನ: ಜನ ಜಾಗೃತಿ ಸಭೆ: ಇಲಾಖೆಯಿಂದ ಸೂಕ್ತವಾದ ತನಿಖೆ ನಡೆಯುತ್ತಿದೆ: ಡಿವೈಎಸ್‌ಪಿ ಗಾನ ಪಿ.ಕುಮಾರ್



ಪುತ್ತೂರು: ಕುಂಬ್ರದಲ್ಲಿ ಸೆ.4ರಂದು ತಡರಾತ್ರಿ ನಡೆದ ಸರಣಿ ಕಳ್ಳತನ ಹಾಗೂ ನೆರೆಯ ಗ್ರಾಮ ಬಡಗನ್ನೂರುನಲ್ಲಿ ನಡೆದ ಮನೆ ದರೋಡೆ ಸೇರಿದಂತೆ ಕಳ್ಳತನದ ಬಗ್ಗೆ ಜನಜಾಗೃತಿ ಸಭೆ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿದ್ದ ಗ್ರಾಮಸ್ಥರು ವಿವಿಧ ವಿಚಾರಗಳ ಬಗ್ಗೆ ನೀಡಿದ ಸಲಹೆ ಸೂಚನೆಗಳನ್ನು ಆಲಿಸಿದ ಪುತ್ತೂರು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಇಲಾಖೆಯಿಂದ ಸೂಕ್ತವಾದ ತನಿಖೆ ನಡೆಯುತ್ತಿದೆ. ಕುಂಬ್ರದ ಕಳ್ಳತನವನ್ನು ಗಮನಿಸಿದಾಗ ಸಿಸಿಟಿವಿ ಡಿವಿಆರ್‌ಗಳನ್ನೇ ಕಳ್ಳರು ಎಗರಿಸಿದ್ದಾರೆ. ಆದ್ದರಿಂದ ನಾವು ಸಿಸಿಟಿವಿ ಕ್ಯಾಮರ ಅಳವಡಿಸುತ್ತೇವೆ ಆದರೆ ಡಿವಿಆರ್ ಅನ್ನು ಎಲ್ಲರಿಗೆ ಕಾಣುವ ಹಾಗೆ ಇಡುತ್ತೇವೆ ಇದು ಸರಿಯಲ್ಲ, ಸಿಸಿಟಿವಿ ಡಿವಿಆರ್ ಎಲ್ಲಿ ಇಟ್ಟಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿರಬೇಕು ಅದು ಎಲ್ಲರಿಗೆ ಕಾಣುವ ಹಾಗೆ ಇಡಬಾರದು ಎಂದು ತಿಳಿಸಿದರು. ಇನ್ನು ಸಿಸಿಟಿವಿ ಕ್ಯಾಮರ ಲಿಂಕ್ ಅನ್ನು ನಮ್ಮ ಮೊಬೈಲ್‌ಗಳಿಗೆ ಅಳವಡಿಸಿಕೊಳ್ಳಬೇಕು ಒಂದು ವೇಳೆ ಡಿವಿಆರ್ ಕಳ್ಳತನವಾದರೂ ನಮ್ಮ ಮೊಬೈಲ್‌ನಲ್ಲಿ ಕಳ್ಳರ ಚಲನವಲನ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಹೆಚ್ಚಿನವರ ಮನೆಯ ಹಿಂಬದಿ ಬಾಗಿಲು ಅಷ್ಟಕಷ್ಟೇ ಇರುತ್ತದೆ. ಮನೆ ಕಟ್ಟುವಾಗ ಎದುರು ಬಾಗಿಲಿನ ಬಗ್ಗೆ ಮಾತ್ರ ನಾವು ಗಮನ ಹರಿಸುತ್ತೇವೆ ಅದನ್ನು ಭದ್ರವಾಗಿ ಮಾಡುತ್ತೇವೆ ಆದರೆ ಹಿಂಬದಿ ಬಾಗಿಲನ್ನು ಅಷ್ಟಾಗಿ ಭದ್ರ ಮಾಡುವುದಿಲ್ಲ. ಹಿಂಬದಿ ಬಾಗಿಲಿಗೆ ಒಂದು ಚಿಲಕ ಇಟ್ಟಿರುತ್ತೇವೆ ಇದು ಸರಿಯಲ್ಲ ಕಳ್ಳರು ಹೆಚ್ಚಾಗಿ ಹಿಂಬದಿ ಬಾಗಿಲನ್ನೇ ಮುರಿದು ಒಳನುಗ್ಗುತ್ತಾರೆ. ಆದ್ದರಿಂದ ಹಿಂಬದಿ ಬಾಗಿಲನ್ನು ಭದ್ರವಾಗಿ ಮಾಡುವುದು ಮುಖ್ಯ ಎಂದರು. ನಮ್ಮ ಮನೆಯ ಬಾಗಿಲಿಗೆ ಬೀಗದ ಕೀ ಬದಲು ಡೋರ್ ಲಾಕ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದು ಒಳಿತು. ಏಕೆಂದರೆ ಮನೆಯ ಬಾಗಿಲಿಗೆ ದೊಡ್ಡದಾದ ಬೀಗ ಹಾಕಿ ಹೋದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಬಹಳ ಬೇಗ ಗೊತ್ತಾಗುತ್ತದೆ ಅದರ ಬದಲು ಡೋರ್ ಲಾಕ್ ಹಾಕಿದರೆ ಮನೆಯ ಒಳಗೆ ಇದ್ದಾರೋ ಇಲ್ವೋ ಅನ್ನೋದು ಅಷ್ಟು ಬೇಗ ತಿಳಿಯುವುದಿಲ್ಲ ಎಂದರು.

ಅಪರಿಚಿತರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮುನ್ನ ಅವರ ಆಧಾರ್ ಕಾರ್ಡ್ ಹಾಗೂ ಭಾವಚಿತ್ರವನ್ನು ಪಡೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಿ, ಮನೆಯಲ್ಲಿ ಹಣ, ಚಿನ್ನಾಭರಣವನ್ನು ಇಟ್ಟು ಹೊರಗಡೆ ಹೋಗಬೇಡಿ, ರಾತ್ರಿ ವೇಳೆ ನೀವು ಇಲ್ಲದಿದ್ದರೂ ನೆರೆಮನೆಯವರಲ್ಲಿ ರಾತ್ರಿ ವೇಳೆ ವಿದ್ಯುತ್ ಲೈಟ್ ಹಾಕಲು ಹೇಳಿ ಹೋಗಿ ಇದರಿಂದ ನೀವು ಮನೆಯಲ್ಲಿಯೇ ಇದ್ದೀರಿ ಎಂಬ ಭಾವನೆ ಕಳ್ಳರಿಗೆ ಬರುತ್ತದೆ ಮೊದಲಾದ ಸಲಹೆಗಳನ್ನು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಸಭೆಗೆ ನೀಡಿದರು.

ಕಳ್ಳತನದ ವಿಚಾರದಲ್ಲಿ ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ: ಎಸ್.ಐ ಧನಂಜಯ ಬಿ.ಸಿ: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಧನಂಜಯ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಷಯ ಸೇರಿದಂತೆ ಯಾವುದೇ ವಿಷಯದಲ್ಲೂ ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿಗಳು ಹಿಂದೆ ಬಿದ್ದಿಲ್ಲ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಬೀಟ್ ಸಿಸ್ಟಮ್ ನಡೆಯುತ್ತಿದೆ. ಗ್ರಾಮದಲ್ಲಿ ಹಲವು ಬೀಟ್ ಪಾಯಿಂಟ್‌ಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ನಾನು ಕೂಡ ಪ್ರತಿದಿನ ರಾತ್ರಿ 12 ಗಂಟೆ ಸುಮಾರಿಗೆ ರೌಂಡಪ್ ಬರುತ್ತಿದ್ದೇನೆ. ಕುಟ್ಟಿನೋಪಿನಡ್ಕ, ದರ್ಬೆತ್ತಡ್ಕ ಇತ್ಯಾದಿ ಕುಗ್ರಾಮಗಳಿಗೂ ಭೇಟಿ ಕೊಡುತ್ತಿದ್ದೇನೆ. ಕೆಲವು ಕಡೆಗಳಲ್ಲಿ ನಡೆದುಕೊಂಡೇ ಹೋಗಿದ್ದೇನೆ. ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಚಾರದಲ್ಲಿ ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ ಎಂದು ಅವರು ಹೇಳಿದರು.

ಪ್ರಮುಖರಾದ ತ್ರಿವೇಣಿ ಪಳ್ಳತ್ತಾರು, ದುರ್ಗಾಪ್ರಸಾದ್ ರೈ, ಪ್ರಕಾಶ್ಚಂದ್ರ ರೈ ಕೈಕಾರ, ರತನ್ ರೈ ಕುಂಬ್ರ ಶ್ಯಾಮಸುಂದರ ರೈ, ಸುಂದರ ರೈ ಮಂದಾರ, ವಿಜಯಕುಮಾರ್ ರೈ, ಸಂತೋಷ್ ಭಂಡಾರಿ, ನಾರಾಯಣ ಪೂಜಾರಿ ಕುರಿಕ್ಕಾರ, ಬಶೀರ್ ಕಡ್ತಿಮಾರ್ ಸಹಿತ ಹಲವರು ವಿವಿಧ ಅಭಿಪ್ರಾಯ ಮಂಡಿಸಿ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ದೈವಸ್ಥಾನ, ಮಸೀದಿ, ಭಜನಾ ಮಂದಿರ ಇತ್ಯಾದಿ ಧಾರ್ಮಿಕ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ವರ್ತಕರ ಸಂಘದವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!