ಪುತ್ತೂರು ವಿಧಾನಸಭಾ ಕ್ಷೇತ್ರ ಗ್ರಾಪಂ ವ್ಯಾಪ್ತಿಯ ರಸ್ತೆಗಳ ದುರಸ್ಥಿಗೆ ಶಾಸಕರ ಸೂಚನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯ ಎಲ್ಲಾ ರಸ್ತೆಗಳ ದುರಸ್ಥಿ ಅಥವಾ ಹೊಂಡ ಮುಚ್ಚುವ ಕಾಮಗಾರಿ ನಡೆಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದ್ದು ಆ ಪ್ರಕಾರ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂ ರಸ್ತೆಗಳು ಏಕಕಾಲದಲ್ಲಿ ದುರಸ್ಥಿ ಕಾರ್ಯ ನಡೆಯಲಿದೆ.

ಪುತ್ತೂರು ತಾಲೂಕಿನಾದ್ಯಂತ ವಿಪರೀತ ಮಳೆಯಿದ್ದು ಮಳೆಗೆ ಕೆಲವು ಕಡೆಗಳಲ್ಲಿ ಗ್ರಾಪಂ ವ್ಯಾಪ್ತಿಯ ರಸ್ತೆಗಳು ಹೊಂಡ ಬಿದ್ದಿದೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ಚರಂಡಿ ಇಲ್ಲದ ಕಾರಣ ಮಳೆ ನೀರಿಗೆ ರಸ್ತೆಗಳು ಕೆಲವು ಕಡೆಗಳಲ್ಲಿ ಹೊಂಡ ಬಿದ್ದಿದೆ. ರಸ್ತೆಗಳು ಹೊಂಡ ಬಿದ್ದಿರುವ ಕಾರಣ ವಾಹನಗಳು ಅಪಘಾತವಾಗುವ ಸಂಭವ ಇರುವುದರಿಂದ ಗ್ರಾಮೀಣ ಭಾಗದ ಸಾರ್ವಜನಿಕರು ಶಾಸಕ ಅಶೋಕ್ ರೈ ಅವರ ಗಮನಕ್ಕೆ ತಂದಿದ್ದರು.
ಶಾಸಕರ ಪುತ್ತೂರು ಕಚೇರಿಗೆ ಬುಧವಾರ ಒಂದೇ ದಿನದಲ್ಲಿ 73 ಮನವಿಗಳು ಬಂದಿವೆ. ಗ್ರಾಪಂ ವ್ಯಾಪ್ತಿಯ ರಸ್ತೆಗಳು ಗುಂಡಿ ಬಿದ್ದಿರುವ ಕಾರಣ ಮತ್ತು ಸೂಕ್ತ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಶಾಸಕರು ಈ ಬಗ್ಗೆ ತಕ್ಷಣ ಕ್ರಮವಹಿಸಬೇಕು ಎಂದು ಮನವಿ ಸಲ್ಲಿಕೆಯಾಗಿತ್ತು. ಮನವಿ ಗೆ ಸ್ಪಂದಿಸಿದ ಶಾಸಕರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ ಕರ್ಬಾರಿಯವರಿಗೆ ನಿರ್ದೇಶನ ನೀಡಿ ಪುತ್ತೂರು ವಿಧಾನಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗ್ರಾಪಂ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಪರಿಶೀಲನೆ ಮಾಡಬೇಕು, ಎಲ್ಲೆಲ್ಲಿ ಯಾವ್ಯಾವ ರಸ್ತೆಗಳು ಹೊಂಡ ಬಿದ್ದಿದೆಯೋ ಅದನ್ನು ದುರಸ್ಥಿ ಮಾಡಬೇಕು, ಚರಂಡಿ ಇಲ್ಲದ ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಕ್ರಮವಹಿಸಬೇಕು. ಇದಕ್ಕಾಗಿ ಜಿಪಂ ಅನುದಾನವನ್ನು ಬಳಕೆ ಮಾಡಿ , ಅನುದಾನದ ಕೊರತೆಯಾದಲ್ಲಿ ತಕ್ಷಣ ತಿಳಿಸಬೇಕು ಎಂದು ನಿರ್ದೇಶನ ನೀಡಿದ್ದು ಈ ಕಾಮಗಾರಿಯನ್ನು ತಕ್ಷಣ ಮಾಡಬೇಕು ಎಂಬ ಸೂಚನೆಯನ್ನು ಶಾಸಕರು ನೀಡಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಹೊಂಡ ಬಿದ್ದರೆ ಅದನ್ನು ದುರಸ್ಥಿ ಮಾಡುವುದು ಮಳೆಗಾಲ ಮುಗಿದ ಬಳಿಕ ಆದರೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಗಾಲದಲ್ಲೇ ದುರಸ್ಥಿ ಕಾರ್ಯ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಈ ಕಾಮಗಾರಿ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿ ಸಂಚಾರಕ್ಕಿರುವ ಜಿಪಂ ರಸ್ತೆಗಳು ಎಂದು ಕರೆಯಲ್ಪಪಡುವ ಗ್ರಾಪಂ ವ್ಯಾಪ್ತಿಯ ಈ ರಸ್ತೆಗಳಿಗೆ ಮಳೆಗಾಲದಲ್ಲಿ ದುರಸ್ಥಿ ಭಾಗ್ಯ ದೊರೆತಂತಾಗಿದೆ.
ವಿಪರೀತ ಮಳೆಗೆ ಗ್ರಾಪಂ ವ್ಯಾಪ್ತಿಯ ರಸ್ತೆಗಳು ಹೊಂಡ ಬಿದ್ದಿದೆ ಮತ್ತು ಚರಂಡಿಯಿಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದ್ದು ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ತನ್ನ ಕಚೇರಿಗೆ ಸುಮಾರು 73 ಮಂದಿ ವಿವಿಧ ಸಾರ್ವಜನಿಕರು ರಸ್ತೆ ದುರಸ್ಥಿಗೆ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೂಡಲೇ ದುರಸ್ಥಿ ಕಾರ್ಯ ನಡೆಸುವಂತೆ ಜಿಪಂ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಮಳೆಗಾಲ ಮುಗಿದ ಬಳಿಕ ರಸ್ತೆಗಳ ಡಾಮರೀಕರಣ ಕೆಲ ನಡೆಯಲಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯ ರಸ್ತೆಗಳ ದುರಸ್ಥಿ ನಡೆಯಲಿದೆ. ಅನುದಾನದ ಕೊರತೆ ಇದ್ದಲ್ಲಿ ತಿಳಿಸುವಂತೆಯೂ ನಿರ್ದೇಶನ ನೀಡಲಾಗಿದೆ. ತನ್ನ ಕ್ಷೇತ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾನು ವ್ಯವಸ್ಥೆ ಮಾಡುತ್ತೇನೆ
-ಅಶೋಕ್ ರೈ, ಶಾಸಕರು, ಪುತ್ತೂರು





