ಕರಾವಳಿಕ್ರೀಡೆರಾಜ್ಯ

ಮೈಸೂರು ದಸರಾದಲ್ಲಿ ಕಂಬಳ ನಿಶ್ಚಿತ: ಹೈಪವರ್ ಕಮಿಟಿ ಸಭೆಯಲ್ಲಿ ತೀರ್ಮಾನ


ಪುತ್ತೂರು: ಮೈಸೂರಿನಲ್ಲಿ ಕಂಬಳ ಆಗುತ್ತದೋ ಇಲ್ಲವೋ ಎಂಬ ಅನುಮಾನ ಕೆಲವರಿಗಿತ್ತು, ಮೈಸೂರಿನ ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದಕ್ಕೆ ಕೆಲವರ ವಿರೋಧವಿದ್ದದ್ದೇ ಈ ಅನುಮಾನಕ್ಕೆ ಕಾರಣವಾಗಿತ್ತು ಆದರೆ ಈ ಅನುಮಾನಕ್ಕೆ ತೆರೆ ಎಳೆಯಲಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಕಂಬಳ ನಡೆಸುವುದಕ್ಕೆ ತೀರ್ಮಾನ ಮಾಡಲಾಗಿದೆ.



ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾಗೆ ಕಂಬಳ ಆಯೋಜನೆ ಮಾಡಲಾಗಿದೆ. ವಿಶ್ವಪ್ರಸಿದ್ದಿ ಪಡೆದ ದಸರಾದಲ್ಲಿ ಈ ಬಾರಿ ಮಂಗಳೂರಿನ ಕಂಬಳ ಕೋಣಗಳ ಓಟ ನಡೆಯುವುದು ನಿಶ್ಚಿತವಾಗಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸುವಂತೆ ಮುಖ್ಯಮಂತ್ರಿ ಡಿಕೆಶಿವಕುಮಾರ್ ಸೂಚನೆಯನ್ನೂ ನೀಡಿದ್ದಾರೆ.

 


ಇಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದಸರಾಗೆ ಕಂಬಳ ಆಯೋಜನೆ ಮಾಡುವಂತೆ ಖುದ್ದು ಮುಖ್ಯಮಂತ್ರಿಗಳೇ ಶಾಸಕ ಅಶೋಕ್ ರೈ ಅವರಿಗೆ ಕೆಲದಿನಗಳ ಹಿಂದೆ ಸೂಚನೆ ನೀಡಿದ್ದರು. ಆ ಬಳಿಕ ಕಂಬಳ ನಡೆಸುವ ಜಾಗವನ್ನು ವೀಕ್ಷಣೆ ಮಾಡಿದ್ದ ಶಾಸಕರು ಜಾಗವನ್ನು ಗುರುತಿಸಿದ್ದರು, ಬಳಿಕ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯೂ ನಡೆದಿತ್ತು. ಆ ಬಳಿಕ ಕೆಲವರು ಕಂಬಳಕ್ಕೆ ವಿರೋಧ ಮಾಡಿದ್ದರು.



ಸಭೆಯಲ್ಲಿ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಡಾ. ಯತೀಂದ್ರ, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರುಗಳು, ಕಂಬಳಕ್ಕೆ ವಿರೋಧ ಮಾಡಿದ್ದ ಮೈಸೂರು ಸಂಸದ ಯಧುವೀರ್ ಕೂಡಾ ಭಾಗವಹಿಸಿ ಕಂಬಳಕ್ಕೆ ಬೆಂಬಲ ಸೂಚಿಸಿದರು.



ವಿಶ್ವಪ್ರಸಿದ್ದ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಜಿಲ್ಲಾ ಕಂಬಳ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು. ಪೇಟ ತೊಡಿಸಿ ಕಂಬಳದ ಬೆತ್ತವನ್ನು ನೀಡುವ ಮೂಲಕ ಸನ್ಮಾನಿಸಲಾಯಿತು. ಕಂಬಳ ಸಮಿತಿ ಪರವಾಗಿ ಪುತ್ತೂರು ಶಾಸಕ ಅಶೋಕ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಕಂಬಳ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.



ಮೈಸೂರು ದಸರಾದಲ್ಲಿ ಕಂಬಳ ನಡೆಸುವುದೆಂದು ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು, ಜೊತೆಗೆ ಅಧಿಕಾರಿಗಳು, ಎಲ್ಲಾ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಕಂಬಳಕ್ಕೆ ಸಿದ್ದತೆಗೊಳಿಸುವಂತೆ ಸಿ ಎಂ ಅವರು ಆದೇಶವನ್ನು ಮಾಡಿದ್ದಾರೆ. ತುಳುನಾಡಿನ ಜನಪದ ಕಲೆಯೊಂದು ಮೈಸೂರು ದಸರಾದಲ್ಲಿ ಅನಾವರಣಗೊಳ್ಳುವ ಮೂಲಕ ಕಂಬಳಕ್ಕೆ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಪ್ರಚಾರ ಲಭಿಸಿದಂತಾಗುತ್ತದೆ. ಕಂಬಳಕ್ಕೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೂ ನಾವು ಸನ್ಮಾನವನ್ನು ಮಾಡಿದ್ದೇವೆ.
ಎಂದು ಶಾಸಕ ಅಶೋಕ್ ರೈ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!