ಮಂಗಳೂರು: ನಗದು ಕಳವು ಪ್ರಕರಣ, ಆರೋಪಿಯ ಬಂಧನ
ಮಂಗಳೂರು: ನಗರದ ಬಂದರ್ ಬೀಬಿ ಅಲಾಬಿ-ಜೆಎಂ ರಸ್ತೆಯ ಮಧ್ಯೆ ವಾಹನದಿಂದ ಹಣವನ್ನು ಕಳವುಗೈದಿದ್ದ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಸಬಾ ಬೆಂಗ್ರೆಯ, ಪ್ರಸಕ್ತ ಜಪ್ಪು ಮಾರ್ಕೆಟ್ ಬಳಿಯ ಗುಜ್ಜರಕೆರೆಯ ನಿವಾಸಿ ಝಾಕಿರ್ ಹುಸೈನ್ ಯಾನೆ ಜಾಕಿ (38) ಬಂಧಿತ ಆರೋಪಿ.

ಫೆ.7ರಂದು ಬೀಬಿ ಅಲಾಬಿ ರಸ್ತೆಯ ಅಂಗಡಿಯೊಂದರಲ್ಲಿ ಅಡಿಕೆ ಮಾರಾಟ ಮಾಡಿ ಬಂದ 1,28,740 ರೂ.ಗಳನ್ನು ವಾಹನದ ಡ್ಯಾಶ್ ಬೋಡ್ ್ರನಲ್ಲಿಟ್ಟು ಬಂದರ್ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್ ಏಜೆನ್ಸಿಯಿಂದ ಶೀಟ್ ಖರೀದಿಸಲು ತೆರಳಿದ್ದೆ. ಬಳಿಕ ವಾಹನಕ್ಕೆ ಬಂದು ಡ್ಯಾಶ್ ಬೋರ್ಡ್ ತೆರೆದಾಗ ಅದರಲ್ಲಿಟ್ಟಿದ್ದ ಹಣ ಕಳವಾಗಿರುವುದು ಕಂಡು ಬಂದಿದೆ ಎಂದು ಮುಹಮ್ಮದ್ ನಿಝಾಮುದ್ದೀನ್ ಎಂಬವರು ಬಂದರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿದ್ದ ಠಾಣೆಯ ಇನ್ಸ್ಪೆಕ್ಟರ್ ಸಚಿನ್ ಕುಮಾರ್, ಎಸ್.ಐ ಶೀತಲ್ ಅಲಗೂರು, ಎಎಸ್ ಐಗಳಾದ ಶಶಿಧರ, ದಾಮೋದರ್ ಮತ್ತು ಸಿಬ್ಬಂದಿ ಆರೋಪಿ ಝಾಕಿರ್ ಹುಸೈನ್ನನ್ನು ರವಿವಾರ ಬಂಧಿಸಿದ್ದಾರೆ. ಆರೋಪಿಯಿಂದ 70,000 ರೂ. ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಕಳವುಗೈದ ಹಣದಿಂದ ಖರೀದಿಸಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ವಿರುದ್ಧ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣ ಹಾಗೂ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಆಟೊ ರಿಕ್ಷಾದಿಂದ ನಗದು ಕಳವು ಮಾಡಿದ ಪ್ರಕರಣ ದಾಖಲಾಗಿತ್ತು.





