ಬೆಳ್ತಂಗಡಿ: ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಪೊಲೀಸ್ ದಾಳಿ, ಇಬ್ಬರ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ: ದಿನಾಂಕ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಮಲವಂತಿಗೆ ಗ್ರಾಮದ ಅಬ್ದುಲ್ ರಜಾಕ್ (28) ಎಂಬವರಿಗೆ ಸಂಬಂದಪಟ್ಟ ಅಂಗಡಿಯಲ್ಲಿ, ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಜು.2ರಂದು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಯಲ್ಲಪ್ಪ ಹೆಚ್ ಮಾದರ ಅವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ಒಟ್ಟು 47 ಕೆಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಪ್ರಿಡ್ಜ್ ನೊಳಗೆ ಇರಿಸಿರುವುದು ಕಂಡುಬಂದಿದ್ದು ಅದನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ಆರೋಪಿ ಅಬ್ದುಲ್ ರಜಾಕ್ ಹಾಗೂ ಅಂಗಡಿಯಲ್ಲಿದ್ದ ಮತ್ತೋರ್ವ ಆರೋಪಿ ಮಲವಂತಿಗೆ ಗ್ರಾಮದ ಅಬ್ದುಲ್ ರವೂಪ್ (20) ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವದೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಧೆ ಮಾಡಲಾದ ಜಾನುವಾರಿನ ಬಗ್ಗೆ ವಿಚಾರಿಸಲಾಗಿ, ಸಹೋದರರಾದ ಆರೋಪಿಗಳು ಅವರ ಮನೆಯಲ್ಲಿ ಸಾಕಿದ್ದ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.