ಸುಡು ಬಿಸಿಲಿನಿಂದ ಬರಡಾದ ಸುಳ್ಯದ ಜೀವನದಿ ಪಯಸ್ವಿನಿ
ಸತ್ತು ಬಿದ್ದಿದೆ ಸಾವಿರಾರು ಮೀನುಗಳು
ಹೆಚ್ಚಾಗುತ್ತಿರುವ ಬಿಸಿಲಿನ ತಾಪಕ್ಕೆ ಸುಳ್ಯದ ಜೀವನದಿಯಾದ ಪಯಸ್ವಿನಿಯ ಹರಿವು ನಿಂತು ಹೋಗಿದೆ. ನದಿಯ ಗುಂಡಿಗಳಲ್ಲಿ ಶೇಖರಣೆಗೊಂಡ ನೀರುಗಳು ಬತ್ತಿ ಖಾಲಿಯಾಗುತ್ತಿದೆ.

ಈ ಕಾರಣದಿಂದಾಗಿ ಸುಳ್ಯದ ಜೀವನದಿ ಪಯಸ್ವಿನಿಯ ಒಡಲಿನಲ್ಲಿದ್ದ ಸಾವಿರಾರು ಮೀನುಗಳ ಮಾರಣಹೋಮ ನಡೆಯುತ್ತಿದೆ. ನದಿ ತಟದಲ್ಲಿ ಎಲ್ಲೆಂದರಲ್ಲಿ ಸಾವಿರಾರು ಮೀನುಗಳು ತನ್ನ ಪ್ರಾಣ ಕಳೆದುಕೊಂಡು ಸುಡು ಬಿಸಿಲಿನಲ್ಲಿ ಒಣಗಿ ಹೋಗುತ್ತಿದೆ. ಪರಿಸರ ದುರ್ನಾಥದಿಂದ ಕೂಡಿದೆ. ಈ ದೃಶ್ಯ ನೋಡುಗರ ಮನ ಕಲಕುವಂತಿದೆ.
ಸುಳ್ಯ ತಾಲೂಕಿನೆಲ್ಲೆಡೆಯಲ್ಲಿ ಜಲಕ್ಷಾಮದ ಭೀತಿ ಎದುರಾಗಿದ್ದು,ಜನರು ಮಳೆಗಾಗಿ ದೇವರ ಮೊರೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮನುಷ್ಯ ತನ್ನನ್ನು ಈ ಕ್ಷಾಮಗಳಿಂದ ರಕ್ಷಿಸಿಕೊಳ್ಳಲು ಜೀವವನ್ನು ಪಣಕ್ಕಿಟ್ಟಾದರೂ ನೀರನ್ನು ಹುಡುಕಿ ತರಬಲ್ಲನು. ತನ್ನ ಇಡೀ ಸಂಪತ್ತನ್ನು ಅದಕ್ಕಾಗಿ ವಿನಿಯೋಗಿಸಲು ಸಿದ್ಧನಿದ್ದಾನು.
ಆದರೆ ಮಾತುಬಾರದ,ತನ್ನ ಜೀವದ ರಕ್ಷಣೆಯನ್ನು ಮಾಡಿಕೊಳ್ಳಲು ತಾನಿರುವ ಜಾಗದಿಂದ ಮತ್ತೊಂದು ಜಾಗಕ್ಕೆ ನೀರನ್ನು ಹುಡುಕಿಕೊಂಡು ಹೋಗಲು ಸಾಧ್ಯವಾಗದ ಜಲಚರಗಳು, ನೀರನ್ನೆ ತನ್ನ ಪ್ರಪಂಚವೆಂದು ನಂಬಿರುವ ಮೀನುಗಳ ಈ ಮಾರಣ ಹೋಮಗಳಿಗೆ ಕಾರಣಕರ್ತರಾದರು ಯಾರು.
ಈ ರೀತಿಯ ತುರ್ತು ಪರಿಸ್ಥಿತಿಗಳು ಮನುಷ್ಯನ ಜೀವನದಲ್ಲಿ ಉಂಟಾದರೆ ಪರ್ಯಾಯ ಯೋಜನೆಗಳು ಮತ್ತು ಅನುದಾನಗಳನ್ನು ತರಿಸಲು ಅವೆಷ್ಟು ಪ್ರತಿಭಟನೆಗಳು ನಡೆಯುತ್ತಿದ್ದವು. ಎಷ್ಟು ಗಲಾಟೆಗಳು ಮಾಡುತ್ತಿದ್ದರು.
ಆದರೆ ಈ ಮೂಕ ಪ್ರಾಣಿಗಳ ರೋಧನೆ ಮತ್ತು ವೇದನೆ ಕಾಣುವವರು ಇಂದು ಯಾರು ಇಲ್ಲದಂತಾಗಿದೆ.
ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಯೊಂದು ಜೀವದ ರಕ್ಷಣೆ ಮತ್ತು ಹಕ್ಕುಗಳನ್ನು ವಿಶೇಷವಾಗಿ ಉಲ್ಲೇಖಿ ಕಾಯ್ದೆಗಳನ್ನು ರಚಿಸಲಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಇಲಾಖೆಗಳನ್ನು ನೇಮಿಸಿ ಅರಣ್ಯ ರಕ್ಷಣೆ, ಜಲಚರಗಳ ರಕ್ಷಣೆ,ಪ್ರಾಣಿ ಪಕ್ಷಿಗಳ ರಕ್ಷಣೆ, ಮಾನವ ಸಂಪನ್ಮೂಲಗಳ ರಕ್ಷಣೆ ಮುಂತಾದ ಸಾವಿರಾರು ಇಲಾಖೆಗಳನ್ನು ರೂಪಿಸಲಾಗಿದೆ.ಅದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸರ್ಕಾರಗಳು ಖರ್ಚು ಮಾಡುತ್ತಿರುತ್ತದೆ.
ಆದರೆ ಈ ರೀತಿಯ ತುರ್ತು ಪರಿಸ್ಥಿತಿಗಳು ಬಂದು ಪ್ರಾಣಿ ಪಕ್ಷಿಗಳು ನದಿ ತೀರದಲ್ಲಿ ಜಲಚರಗಳು ಮಾರಣ ಹೋಮಕ್ಕೆ ತುತ್ತಾಗುತ್ತಿದ್ದರೆ ಇದರ ಬಗ್ಗೆ ಚಿಂತಿಸುವ ಮನಸ್ಸುಗಳು,ಕಾಯ್ದೆ ಕಾನೂನುಗಳು ಇಲ್ಲದಂತಾಗಿದೆಯೇ?
ಬಹುಷ್ಯ ಒಬ್ಬ ವ್ಯಕ್ತಿ ಹಣ ಸಂಪಾದನೆಗಾಗಿ ಈ ರೀತಿಯ ಮೀನುಗಳನ್ನು ತನ್ನ ಅದೀನದಲ್ಲಿ ಸಾಕುತ್ತಿದ್ದರೆ ಈ ರೀತಿಯ ಪರಿಸ್ಥಿತಿ ಉಂಟಾಗಲು ಆತ ಬಿಡುತ್ತಿದ್ದನೇ? ತನ್ನ ಸಂಪಾದನೆಗೆ ನಷ್ಟ ಬಾರದಂತೆ ನೋಡಿಕೊಳ್ಳಲು ನೀರಿನ ಪರ್ಯಾಯಮಾರ್ಗಗಳನ್ನು ಹುಡುಕಿ ಆ ಮೀನುಗಳ ರಕ್ಷಣೆಗಾಗಿ ಮುಂದಾಗುತ್ತಿದ್ದ.ಆದರೆ ಪ್ರಕೃತಿ ನೀಡಿರುವ ನದಿಗಳಲ್ಲಿರುವ ಈ ಜಲಚರಗಳ ರಕ್ಷಕರು ಯಾರು, ಇದರ ಹೊಣೆ ಯಾರು ?

ಅದೇ ಜಾಗದಲ್ಲಿ ಎಲ್ಲವೂ ಸರಿಯಾಗಿದ್ದು ದಷ್ಟಪುಷ್ಟವಾದ ಮೀನುಗಳು ನದಿಗಳಲ್ಲಿ ಕಾಣಿಸುತ್ತಿದ್ದಾಗ ಅವುಗಳನ್ನು ಹಿಡಿಯಲು ಹೋದರೆ ನೂರಾರು ಕಾನೂನಿನ ಕುಣಿಕೆಗಳು,ಕಾಯ್ದೆಗಳು ಅಲ್ಲಿ ಗೋಚರಿಸಲು ಆರಂಭವಾಗುತ್ತದೆ.ಸಾವಿರಾರು ಬೆರಳುಗಳು ಆತನ ಎದುರು ನಿಂತಿರುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ರಕ್ಷಣೆ ಎಂಬುದು ಇದುವೇ ಎಂಬಂತೆ ಕಂಡುಬರುತ್ತದೆ. ಆದರೆ ರಕ್ಷಣೆ ಎಂಬುದು ಅದು ಮಾತ್ರವಲ್ಲ ಈ ರೀತಿಯ ತುರ್ತು ಸಂದರ್ಭಗಳು ಬಂದಾಗ ಆ ಜೀವಚರಗಳ ಜೀವಗಳ ರಕ್ಷಣೆಗೆ ನಿಲ್ಲುವುದೇ ಸರಿಯಾದ ರಕ್ಷಣೆ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಮನುಷ್ಯ ತನ್ನ ಬದುಕಿಗಾಗಿ ಕೊಳವೆ ಬಾವಿಯ ಮೊರೆ ಹೋಗುತ್ತಾರೆ , ಕೊಳವೆ ಬಾವಿಯಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿರುವುದಾಗಿ ತಿಳಿದುಬಂದಾಗ ಬೇರೆ ಯಾವುದಾದರೂ ವ್ಯವಸ್ಥೆಗಳನ್ನು ಕಂಡುಹಿಡಿದುಕೊಳ್ಳುತ್ತಾನೆ.
ಆದರೆ ಮಾತೇ ಬಾರದ ಈ ರೀತಿಯ ಜೀವಚರಗಳು ಪ್ರಕೃತಿ ನೀಡುವ ಎಲ್ಲಾ ರೀತಿಯ ಕಷ್ಟಗಳನ್ನು ತಾನೇ ಸಹಿಸಿಕ್ಕೊಂಡು ಬಲಿಯಾಗುತ್ತಿರುವುದು ಮಾತ್ರ ಅವುಗಳ ರಕ್ಷಣೆಯ ಜವಾಬ್ದಾರಿತಿಯನ್ನು ಒತ್ತಿರುವ ವ್ಯವಸ್ಥೆಗಳಿಗೆ ದೊರೆಯುವ ಶಾಪವೇ ಎಂಬುಹುದಂತೂ ಅಷ್ಟೇ ಸತ್ಯ ಸಂಗತಿಯಾಗಿದೆ.
ಒಟ್ಟಿನಲ್ಲಿ ಈ ಸಂವಿಧಾನದಿಂದ ಮನುಷ್ಯ ಜೀವನದಲ್ಲಿ ಸಿಗುವ ಕಾಯ್ದೆ ಕಾನೂನುಗಳು ಈ ರೀತಿಯ ಜಲಚರಗಳಿಗೂ ಜೀವ ರಾಶಿಗಳು ಸಿಗಲಿ ಎಂಬುದೇ ಆಶಯವಾಗಿದೆ.
✍️ ಹಸೈನಾರ್ ಜಯನಗರ