ಆ.31ರಂದು ಪುತ್ತೂರಿನಲ್ಲಿ ಪ್ರತಿಭಟನೆ ವಿಚಾರ: ಪೊಲೀಸ್ ಇಲಾಖೆ ಸ್ಪಷ್ಟನೆ
ಪುತ್ತೂರು: ಆಗಸ್ಟ್ 31ರಂದು ಪುತ್ತೂರಿನಲ್ಲಿ ನಡೆಯಲಿರುವ ಪ್ರತಿಭಟನೆ ಕಾರ್ಯಕ್ರಮಗಳ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ದಿನಾಂಕ 31.08.2026 ರಂದು ಪುತ್ತೂರಿನಲ್ಲಿ ಪ್ರತಿಭಟನಾ ಸಭೆ ನಡೆಸಲು ಅನುಮತಿ ಕೋರಿ ಈಗಾಗಲೇ ಒಂದು ಸಂಘಟನೆಯು ಇಂದು 27.08.2026ರಂದು ಬೆಳಿಗ್ಗೆ ಅರ್ಜಿ ಸಲ್ಲಿಸಿರುತ್ತದೆ. ಸದ್ರಿ ಅರ್ಜಿಯಲ್ಲಿ ನಮೂದಿಸಿರುವ ಪ್ರತಿಭಟನಾ ಸ್ಥಳವು ಸರ್ಕಾರದ ಮಾರ್ಗಸೂಚಿಗಳ (Guidelines) ಅನುಸಾರವಾಗಿ ಇಲ್ಲದಿರುವುದರಿಂದ, ಸೂಕ್ತ ಸ್ಥಳವನ್ನು ಗುರುತಿಸಿ ಮರು ಅರ್ಜಿ ಸಲ್ಲಿಸುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ. ಈ ಸಂಬಂಧ ಮಾರ್ಗಸೂಚಿಯ ಪ್ರತಿಯನ್ನೂ ಅರ್ಜಿದಾರರಿಗೆ ನೀಡಲಾಗಿದೆ.
ಇದೇ ವೇಳೆ, ಮತ್ತೊಂದು ಸಂಘಟನೆಯು 31.08.2026ರಂದು ಪುತ್ತೂರಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದ್ದು, ಸದ್ರಿ ಸಂಘಟನೆಯು ಈವರೆಗೆ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಯಾವುದೇ ಅರ್ಜಿಯನ್ನು ಸಲ್ಲಿಸಿರುವುದಿಲ್ಲ. ಸದ್ರಿ ಸಂಘಟನೆಯು ಅನುಮತಿಗಾಗಿ ಅರ್ಜಿ ಸಲ್ಲಿಸಿದಲ್ಲಿ, ಬೇರೆ ದಿನಾಂಕವನ್ನು ನಿಗದಿಪಡಿಸಿ ಅಗತ್ಯ ಅನುಮತಿ ಪಡೆಯಲು ಸೂಚಿಸಲಾಗುವುದು.
ಆದ್ದರಿಂದ, ಸಾರ್ವಜನಿಕರು ಪ್ರತಿಭಟನೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ, ಕಾರ್ಯಕ್ರಮದ ಆಯೋಜಕರು ಸಂಬಂಧಿಸಿದ ಇಲಾಖೆಯಿಂದ ಅಗತ್ಯ ಅನುಮತಿಯನ್ನು ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.



