ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ಆರೋಪ: 11 ಮಂದಿ ಕಾಲೇಜು ವಿದ್ಯಾರ್ಥಿಗಳ ಬಂಧನ
ಮಂಗಳೂರು: ನಗರದ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿಯಿರುವ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ನಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ತಂದಿರಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ಪಾಂಡೇಶ್ವರ ಠಾಣೆಯ ಪೊಲೀಸರು ದಾಳಿ ನಡೆಸಿ 11 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಅದೈತ್ ಶ್ರೀಕಾಂತ್, ಮುಹಮ್ಮದ್ ಅಪ್ಪಿನ್, ಮುಹಮ್ಮದ್ ಸ್ವಾನೀದ್, ನಿಬಿನ್ ಟಿ. ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮುಹಮ್ಮದ್ ಜಾಸೀಲ್ ವಿ, ಸಿದಾನ್ ಪಿ ಬಂಧಿತ ಆರೋಪಿಗಳು. ಪಾಂಡೇಶ್ವರ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್ ಸ್ಟೇಬಲ್ ಪುಟ್ಟರಾಮ್ ಸಿ.ಎಚ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಮಲ್ಲಿಕ್ ಜಾನ್ ಶುಕ್ರವಾರ ರಾತ್ರಿ 7:45ಕ್ಕೆ ಗಸ್ತು ನಿರತರಾಗಿದ್ದ ವೇಳೆ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಅತ್ತಾದರ ಕಾಪ್ರಿಗುಡ್ಡೆಯ ಅಪಾರ್ಟ್ ಮೆಂಟ್ನ ಫ್ಲ್ಯಾಟ್ ನಂಬರ್ ಎ1ರಲ್ಲಿ ತಂದಿರಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ತಕ್ಷಣ ಠಾಣೆಯ ಎಸ್ ಐ ಶೀತಲ್ ಅಲಗೂರುರ ಗಮನಕ್ಕೆ ತಂದರು. ಅದರಂತೆ ದಾಳಿ ನಡೆಸಿ 11 ಮಂದಿ ಆರೋಪಿಗಳನ್ನು ಬಂಧಿಸಿದರು. ಈ ಆರೋಪಿಗಳು ನಗರದ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಒಡಿಶಾದಿಂದ ಖರೀದಿಸಿ ತಂದಿದ್ದ ಸುಮಾರು 12.264 ಕೆಜಿ ತೂಕದ 2,45,280 ರೂ. ಮೌಲ್ಯದ ನಿಷೇಧಿತೆ ಮಾದಕ ವಸ್ತು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಇದನ್ನು 7 ಪ್ಯಾಕೆಟ್ ಗಳಲ್ಲಿ ತುಂಬಿಸಿಟ್ಟಿದ್ದರು. ಅದರಲ್ಲದೆ 1 ಡಿಜಿಟಲ್ ತೂಕ ಮಾಪನಗಳು, 1.05 ಲಕ್ಷ ರೂ. ಮೌಲ್ಯದ 11 ಮೊಬೈಲ್ ಪೋನ್ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,52,280 ರೂ. ಎಂದು ಅಂದಾಜಿಸಲಾಗಿದೆ.