ರಾಜ್ಯ

ಬೆಂಗಳೂರು: ನಿವೇಶನ ಕಬಳಿಕೆ ಸಂಚು ವಿರೋಧಿಸಿ ಆಮ್ ಆದ್ಮಿ ಪ್ರತಿಭಟನೆ



ಬೆಂಗಳೂರು: ಇಲ್ಲಿನ  ಬಿನ್ನಿಪೇಟೆಯಲ್ಲಿರುವ ಬಿನ್ನಿ ಪಾಠಶಾಲೆಯ ನಿವೇಶನ ಕಬಳಿಸುವ ಸಂಚನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿಯ ಅನೇಕ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮುಖಂಡ ರಾಜಶೇಖರ್ ದೊಡ್ಡಣ್ಣ, “ಮೈಸೂರು ಅರಸರು 1902ರಲ್ಲಿ ಬಿನ್ನಿ ಮಿಲ್‌ ಕಾರ್ಖಾನೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದು ಈ ನಿವೇಶನವನ್ನು ನೀಡಿದ್ದರು. ಸುಮಾರು 120 ವರ್ಷಗಳಿಂದ ಸರ್ಕಾರಿ ಶಾಲೆಗೆ ಬಳಕೆಯಾಗುತ್ತಿರುವ ಈ ಐತಿಹಾಸಿಕ ನಿವೇಶನದ ಅತಿಕ್ರಮಕ್ಕೆ ಪಿತೂರಿ ನಡೆಯುತ್ತಿದೆ” ಎಂದು ಆರೋಪಿಸಿದರು.

“ಶಾಲೆಯ ನಿರ್ವಹಣೆಗಾಗಿ ಬಂದ ಇಟಿಎ ಸಂಸ್ಥೆ ಹಾಗೂ ಬಿನ್ನಿಪೇಟೆ ನಾಗರಿಕ ಹಿತರಕ್ಷಣಾ ಸಂಸ್ಥೆಯು ಪುನರ್‌ ನಿರ್ಮಾಣದ ನೆಪದಲ್ಲಿ ಶಾಲೆಯ ಕಟ್ಟಡವನ್ನು ಮುಂಭಾಗದಲ್ಲಿ ನಿರ್ಮಿಸಿ, ನಿವೇಶನದ ಹಿಂಭಾಗವನ್ನು ಅತಿಕ್ರಮಣ ಮಾಡುತ್ತಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಈ ನಿವೇಶನವು ಸುಮಾರು 12,000 ಚದರ ಅಡಿಯಿದ್ದು, ಕೋಟ್ಯಂತರ ರೂಪಾಯಿ ಬೆಲೆಯಿದೆ. ಹೀಗೆ ಅತಿಕ್ರಮಣ ಮಾಡಿಕೊಂಡ ನಿವೇಶನವನ್ನು ಹಲವು ಸೈಟುಗಳಾಗಿ ಮಾಡಿ ಮಾರಾಟ ಮಾಡಲು ಅವೆರಡು ಸಂಸ್ಥೆಗಳ ಜೊತೆಗೆ ಬಿನ್ನಿಪೇಟೆಯ ಸ್ಥಳೀಯ ರಾಜಕೀಯ ಪುಡಾರಿಗಳು ಕೈಜೋಡಿಸಿದ್ದಾರೆ” ಎಂದು ರಾಜಶೇಖರ್‌ ದೊಡ್ಡಣ್ಣ ಹೇಳಿದರು.

ಏಕಾಏಕಿ ಜೆಸಿಬಿ ತಂದು ಶಾಲೆಯ ಕಟ್ಟಡವನ್ನು ಧ್ವಂಸ ಮಾಡುತ್ತಿರುವ ವೇಳೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕೋಶ ವ್ಯಕ್ತಪಡಿಸಿದರು. ಅನೇಕ ಸ್ಥಳೀಯ ನಾಗರಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.

Leave a Reply

Your email address will not be published. Required fields are marked *

error: Content is protected !!