ನರಿಮೊಗರು ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ತೆರೆಯಲು ವೇದನಾಥ ಸುವರ್ಣ ಆಗ್ರಹ
ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ ಆಗ್ರಹಿಸಿದ್ದಾರೆ.
ಜು.27ರಂದು ನಡೆದ ನರಿಮೊಗರು ಗ್ರಾ.ಪಂ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ನಮ್ಮ ಹಲವು ವರ್ಷಗಳ ಬೇಡಿಕೆಗಳಲ್ಲೊಂದಾಗಿರುವ ಆರೋಗ್ಯ ಕೇಂದ್ರವನ್ನು ನರಿಮೊಗರು ವ್ಯಾಪ್ತಿಯಲ್ಲಿ ತೆರೆಯಬೇಕು. ನಮ್ಮ ಈ ವರೆಗಿನ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ, ಮುಂದಕ್ಕೆ ನರಿಮೊಗರು ಕೇಂದ್ರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು, ಮಾತ್ರವಲ್ಲ ಆರೋಗ್ಯ ಸಚಿವರಿಗೂ ಈ ವಿಷಯದ ಬಗ್ಗೆ ಮನವಿ ಕೊಡಬೇಕು ಎಂದು ಅವರು ಆಗ್ರಹಿಸಿದರು.
ನರಿಮೊಗರು ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯವೂ ಇಲ್ಲ, ಮುಂದಿನ ದಿನಗಳಲ್ಲಿ ಅದೂ ಆಗಬೇಕು. ಸದ್ಯಕ್ಕೆ ದಿನದಲ್ಲಿ ಒಂದು ಹೊತ್ತಾದರೂ ನರಿಮೊಗರು ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿ ಇರುವಂತೆ ವ್ಯವಸ್ಥೆ ಮಾಡಬೇಕೆಂದು ವೇದನಾಥ ಸುವರ್ಣ ಒತ್ತಾಯಿಸಿದರು.