ಸುಳ್ಯ: ಸೌದೆ ತರಲು ಹೋದ ದಂಪತಿಗಳ ಮೇಲೆ ಕಾಡುಕೋಣ ದಾಳಿ; ಆಸ್ಪತ್ರೆಗೆ ದಾಖಲು
ಸೌದೆ ತರಲೆಂದು ಬೆಳಿಗ್ಗೆ ತಮ್ಮ ರಬ್ಬರ್ ತೋಟಕ್ಕೆ ಹೋಗಿದ್ದ ಸಂದರ್ಭ ದಂಪತಿಗಳ ಮೇಲೆ ಕಾಡುಕೋಣವೊಂದು ದಾಳಿ ನಡೆಸಿದ ಪರಿಣಾಮ ದಂಪತಿ ಗಾಯಗೊಂಡ ಘಟನೆ ದೇವಚಳ್ಳ ಗ್ರಾಮದ ಗುಡ್ಡೆ ಎಂಬಲ್ಲಿಂದ ಮಾ.30ರಂದು ವರದಿಯಾಗಿದೆ.
ಮುಂಜಾನೆ ಗುಡ್ಡೆ ಧರ್ಮಪಾಲ ಎಂಬವರು ಪತ್ನಿಯೊಂದಿಗೆ ಬೆಳಿಗ್ಗೆ 9 ಗಂಟೆಯ ವೇಳೆಗೆ ತಮ್ಮ ರಬ್ಬರ್ ತೋಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿತ್ತೆನ್ನಲಾಗಿದೆ.
ಪರಿಣಾಮ ಧರ್ಮಪಾಲರ ತಲೆಯ ಭಾಗಕ್ಕೆ, ದವಡೆಗೆ ಗಂಭೀರ ಗಾಯವಾಯಿತ್ತೆನ್ನಲಾಗಿದೆ. ಅಲ್ಲದೇ ಅವರ ಪತ್ನಿಗೂ ಗಾಯವಾಗಿದ್ದು, ಇಬ್ಬರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.