ನಾಗರ ಹಾವಿನ ವಿಷ ಹೀರಿ ಅಮ್ಮನ ಪ್ರಾಣ ಕಾಪಾಡಿದ ಕೆಯ್ಯೂರಿನ ಶ್ರಮ್ಯ ರೈಯವರಿಗೆ ಶೌರ್ಯ ಪ್ರಶಸ್ತಿ ನೀಡಲು ಆಗ್ರಹ
ಪುತ್ತೂರು: ಅಮ್ಮನ ಕಾಲಿಗೆ ನಾಗರ ಹಾವು ಕಚ್ಚಿದ ವೇಳೆ ತನ್ನ ಪ್ರಾಣದ ಹಂಗು ತೊರೆದು ಹಾವು ಕಚ್ಚಿದ ಸ್ಥಳಕ್ಕೆ ಬಾಯಿ ಇಟ್ಟು ಹಾವಿನ ವಿಷವನ್ನು ಹೀರಿ ಅಮ್ಮನ ಪ್ರಾಣ ಕಾಪಾಡಿರುವ ಕೆಯ್ಯೂರು ಗ್ರಾಮದ ಶ್ರಮ್ಯ ರೈ ಅವರಿಗೆ ಶೌರ್ಯ ಪ್ರಶಸ್ತಿ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಕೆಯ್ಯೂರು ಗ್ರಾಮದ ಸತೀಶ್ ರೈ ಅವರ ಪತ್ನಿ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ಅವರಿಗೆ ತೋಟದಲ್ಲಿ ಹಾವು ಕಚ್ಚಿದ್ದು ಈ ವೇಳೆ ಅವರ ಪುತ್ರಿ, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಶ್ರಮ್ಯ ರೈ ಸಾಹಸ ಮೆರೆದು ಹಾವಿನ ವಿಷವನ್ನು ಅಮ್ಮನ ಕಾಲಿನಿಂದ ಹೀರಿ ಹೊರಕ್ಕೆ ತೆಗೆದು ಅಮ್ಮನ ಪ್ರಾಣ ಕಾಪಾಡಿದ್ದರು.
ಇದೀಗ ಶ್ರಮ್ಯ ರೈ ಧೈರ್ಯ ಮತ್ತು ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಶೌರ್ಯ ಪ್ರಶಸ್ತಿ ನೀಡಬೇಕೆನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂದಿದೆ. ಶ್ರಮ್ಯ ರೈ ಅವರನ್ನು ಸರಕಾರ ಗುರುತಿಸಿ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.





