ಕರಾವಳಿಕ್ರೈಂ

ಮಂಗಳೂರು: ಮದುವೆ ನೆಪದಲ್ಲಿ ಹಲವರಿಗೆ ವಂಚನೆ, ಪ್ರಮುಖ ಆರೋಪಿ ಸಹಿತ ಇಬ್ಬರ ಬಂಧನ


ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿ ವೇದಿಕೆಗಳ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಸರಣಿ ವೈವಾಹಿಕ ವಂಚಕನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ ಸಹಕರಿಸಿದ್ದವನನ್ನೂ  ಬಂಧಿಸಲಾಗಿದೆ.



ಬಂಧಿತ ಪ್ರಮುಖ ಆರೋಪಿಯನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರ (32) ಎಂದು ಗುರುತಿಸಲಾಗಿದೆ. ವಂಚನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೂಲ್ಕಿ ನಿವಾಸಿ ಭಾಸ್ಕರ್‌ನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಆನ್‌ಲೈನ್ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಸುಶಾಂತ್ ಫೆಬ್ರವರಿ 2, 2025ರಂದು ನವಿ ಮುಂಬೈನಲ್ಲಿ ತನ್ನನ್ನು ಮದುವೆಯಾಗಿದ್ದಾನೆ. ಮದುವೆಯ ನಂತರ ವಿವಿಧ ಕಾರಣಗಳನ್ನು ನೀಡಿ ಹಲವು ಕಂತುಗಳಲ್ಲಿ ಒಟ್ಟು ರೂ. 6.60 ಲಕ್ಷವನ್ನು ಪಡೆದಿದ್ದಾನೆ. ಬಳಿಕ ನವೆಂಬರ್ 15, 2025ರಂದು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.


ತನಿಖೆಯ ವೇಳೆ, ಆರೋಪಿ ಈ ಹಿಂದೆ ಕೂಡ ಮದುವೆಯಾಗಿದ್ದು, ಇದೇ ರೀತಿಯ ಮೋಸದ ಮೂಲಕ ಇತರ ಮಹಿಳೆಯರನ್ನೂ ವಂಚಿಸಿರುವುದು ಬಹಿರಂಗವಾಗಿದೆ. ಫೆಬ್ರವರಿ 5, 2026ರಂದು ಬಂಧನಕ್ಕೊಳಗಾದ ಸುಶಾಂತ್ ವಿಚಾರಣೆಯಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ತಾನು ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. 2021ರಲ್ಲಿ ಉಡುಪಿಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ.


ಉಡುಪಿ, ಮುಂಬೈ ಹಾಗೂ ಬೆಂಗಳೂರಿನ ತಲಾ ಇಬ್ಬರು ಮಹಿಳೆಯರು ಮತ್ತು ಕಾರ್ಕಳದ ಒಬ್ಬ ಮಹಿಳೆಗೆ ಮದುವೆಯ ಭರವಸೆ ನೀಡಿ ಹಣ ಸುಲಿಗೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರ ಕುಟುಂಬಗಳ ವಿಶ್ವಾಸ ಗಳಿಸಲು ಭಾಸ್ಕರ್ ತನ್ನನ್ನು ಸುಶಾಂತ್‌ನ ಚಿಕ್ಕಪ್ಪನಂತೆ ಪರಿಚಯಿಸಿಕೊಂಡು ನೆರವಾಗುತ್ತಿದ್ದನು. ಮುಂಬೈನಲ್ಲಿ ನಡೆದ ಧಾರ್ಮಿಕ ಮದುವೆ ಸಮಾರಂಭದಲ್ಲಿಯೂ ಕುಟುಂಬದ ಹಿರಿಯನಂತೆ ನಡೆದುಕೊಂಡು ವಿವಾಹವನ್ನು ಕಾನೂನುಬದ್ಧಗೊಳಿಸಲು ಸಹಕರಿಸಿದ್ದಾನೆ ಎಂಬ ಆರೋಪವಿದೆ.


ಸುಶಾಂತ್ ಪೂಜಾರಿ ವಿರುದ್ಧ ಈಗಾಗಲೇ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಬಂಧಿತ ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!