ಪುತ್ತೂರು: ಲಾರಿಯಿಂದ ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜಗಳ ಕಳ್ಳತನ: ಐವರು ಆರೋಪಿಗಳ ಬಂಧನ
ಪುತ್ತೂರು: ಲಾರಿಯಿಂದ ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜಗಳ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಬಕ ನಿವಾಸಿ ತೃತೇಶ್ (29) ಎಂಬವರ ದೂರಿನಂತೆ, ಸದ್ರಿಯವರು KA 19 AB 2258 ನೇ ಲಾರಿಯ ಮಾಲಕ ಮತ್ತು ಚಾಲಕನಾಗಿದ್ದು, ದಿನಾಂಕ: 03-12-2025 ರಂದು ಪಿರಿಯಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯೊಂದರಿಂದ ತಲಾ 60 ಕೆಜಿ ತೂಕದ 320 ಗೋಣಿ ಚೀಲ ಬ್ಯಾಗ್ ಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದವರು, ಅದೇ ದಿನ ರಾತ್ರಿ ಪುತ್ತೂರಿಗೆ ತಲುಪಿ, ಕಬಕ ನೆಹರೂ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಡೋರ್ ಲಾಕ್ ಮಾಡಿ ತನ್ನ ಮನೆಗೆ ತೆರಳಿರುತ್ತಾರೆ. ದಿನಾಂಕ: 04-12-2025 ರಂದು ಬೆಳಿಗ್ಗೆ ಮರಳಿ ಬಂದು ಸದ್ರಿ ಲಾರಿಯನ್ನು ಚಲಾಯಿಸುತ್ತಾ ಮಧ್ಯಾಹ್ನ ವೇಳೆ ಮಂಗಳೂರಿನ ಬಂದರಿಗೆ ತಲುಪಿರುತ್ತಾರೆ. ಈ ವೇಳೆ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಲು ಬಂದಾಗ, ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡು ಬಂದಿದ್ದು, ಲೋಡನ್ನು ಪರಿಶೀಲಿಸಿದಾಗ, ಲಾರಿಯಲ್ಲಿದ್ದ ಕಾಫಿ ಬೀಜ ತುಂಬಿದ ಗೋಣಿಚೀಲಗಳ ಪೈಕಿ ಸುಮಾರು ರೂ 21,44,000/-ಮೌಲ್ಯದ 80 ಗೋಣಿ ಚೀಲಗಳು ಕಳವಾಗಿರುವುದು ಕಂಡು ಬಂದಿರುತ್ತದೆ.
ತೃತೇಶ್ ಅವರ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 120/2025 ಕಲಂ: 303(2) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಪ್ರಕರಣದ ಆರೋಪಿ ಆಶ್ಲೇಷ ಭಟ್ ಎಂಬಾತನು, ತನ್ನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಹಾಗೂ ಮಹಮ್ಮದ್ ಅಶ್ರಫ್ ಎಂಬವರೊಂದಿಗೆ ಸೇರಿ ಕೃತ್ಯ ನಡೆಸಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ.
ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂ್ಡ್ಸ ಟೆಂಪೋ ಹಾಗೂ ಕಳವಾದ 60 ಕೆಜಿ ತೂಕದ ಕಾಫಿ ತುಂಬಿದ 80 ಚೀಲಗಳನ್ನು ಸ್ವಾಧೀನಪಡಿಸಲಾಗಿದೆ.





